ಭಾಗವತ ಪಟ್ಲ ವಿವಾದ ಸುಖಾಂತ್ಯ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಮ೦ಗಳವಾರ, ಮಾರ್ಚ್ 17 , 2015
|
ಮಾರ್ಚ್ 17, 2015
|
ಭಾಗವತ ಪಟ್ಲ ವಿವಾದ ಸುಖಾಂತ್ಯ
ಕಿನ್ನಿಗೋಳಿ :
ಕಟೀಲು ಐದನೇ ಮೇಳದ ಭಾಗವತ ಪಟ್ಲ ಸತೀಶ್ ಶೆಟ್ಟಿ ಅವರು ಮೇಳಕ್ಕೆ ರಾಜೀನಾಮೆ ನೀಡಿದ್ದಾರೆ ಎಂಬ ವಿವಾದ ಸುಖಾಂತ್ಯ ಕಂಡಿದೆ. ಸೋಮವಾರ ಕಟೀಲಿನಲ್ಲಿ ನಡೆದ ಮಾತುಕತೆಯ ಬಳಿಕ ಭಾಗವತ ಸತೀಶ್ ಶೆಟ್ಟಿ ಪಟ್ಲ ಹಾಗೂ ದೇವಳದ ಆನುವಂಶಿಕ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ ಅವರುಗಳು ಒಟ್ಟಿಗೆ ಮಾಧ್ಯಮದ ಮುಂದೆ ಕಾಣಿಸಿಕೊಂಡು, 'ನಮ್ಮ ಬಾಂಧವ್ಯ ಗುರು ಶಿಷ್ಯರ ಹಾಗಿದೆ'ಎಂದು ಪ್ರಕರಣಕ್ಕೆ ತೆರೆ ಎಳೆದರು.
ಆಸ್ರಣ್ಣರು ಪತ್ರಿಕೆಯೊಂದರಲ್ಲಿ ಬರೆದಿದ್ದಾರೆ ಎಂಬ ಲೇಖನ ಸಂಬಂಧಿಸಿ ಬೇಸರಿಸಿಕೊಂಡ ಭಾಗವತ ಪಟ್ಲರು ಮೇಳಕ್ಕೆ ರಾಜೀನಾಮೆ ನೀಡಿದ್ದಾರೆ. ಬೇರೆ ಮೇಳ ಸೇರುತ್ತಿದ್ದಾರೆ ಎಂದೆಲ್ಲ ವದಂತಿಗಳು ಸಾಮಾಜಿಕ ಜಾಲತಾಣ ಸಹಿತ ಹಲವು ಕಡೆ ಹರಿದಾಡುತ್ತಿದ್ದು, ಗೋಜಲು ಗೊಂಡಿದ್ದ ಪ್ರಕರಣ ಮೇಳದ ಯಜಮಾನರ ಸಮ್ಮುಖ ನಡೆದ ಮಾತುಕತೆಯಲ್ಲಿ ಸುಖಾಂತ್ಯಗೊಂಡಿದೆ.
ಈ ಸಂದರ್ಭ ಮಾತನಾಡಿದ ಭಾಗವತ ಪಟ್ಲ ಸತೀಶ್ ಶೆಟ್ಟಿ, 'ಕಳೆದ ಒಂದು ವಾರದಲ್ಲಿ ಸಾಮಾಜಿಕ ಜಾಲತಾಣ, ಮಾಧ್ಯಮಗಳಲ್ಲಿ ಬಂದ ಸುದ್ದಿಗಳು ಹಾಗೂ ಮೇಳಕ್ಕೆ ರಾಜೀನಾಮೆ ವಿಚಾರ ಸತ್ಯಕ್ಕೆ ದೂರವಾಗಿದೆ' ಎಂದರು. ತನಗೆ ನಾಲ್ಕು ದಿನ ಹಿಂದೆ ವಿಷಯ ಗೊತ್ತಾಯಿತು. ಘಟನೆಯಿಂದ ಮನಸ್ಸಿಗೆ ವೇದನೆಯಾದದ್ದು ನಿಜ. ಪ್ರತಿಕ್ರಿಯೆ ನೀಡುವ ಮೊದಲು ಸತ್ಯಾಸತ್ಯತೆಗಳನ್ನು ಖುದ್ದು ಲಕ್ಷ್ಮೀನಾರಾಯಣ ಆಸ್ರಣ್ಣರೊಂದಿಗೆ ಕೂಲಂಕಷವಾಗಿ ಪರಾಮರ್ಶಿಸಲು ನಿರ್ಧರಿಸಿದ್ದಾಗಿ ವಿವರಿಸಿದ ಭಾಗವತರು, 'ಚರ್ಚೆಗೆ ಕಾರಣವಾದ ಲೇಖನ ಕಪೋಲ ಕಲ್ಪಿತ'ಎಂದು ತನಗೆ ಮನದಟ್ಟಾಗಿದ್ದರಿಂದ ವಿವಾದ ಮುಗಿದಿದೆ ಎಂದರು.
ತಾನು ಧರ್ಮಸ್ಥಳ ಮೇಳ ಸೇರುತ್ತೇನೆ ಎಂಬುದು ಅಪಪ್ರಚಾರವಾಗಿದ್ದು, ಖಾಸಗಿ ಕಾರ್ಯಕ್ರಮದ ನಿಮಿತ್ತ ಅಲ್ಲಿಗೆ ಹೋಗಿದ್ದಾಗಿ ತಿಳಿಸಿದರು. 'ನನ್ನ ಸೇವೆ ಕಟೀಲು ತಾಯಿಗೆ ಮುಡಿಪಾಗಿಟ್ಟಿದ್ದೇನೆ. ನಾನು ಕಟೀಲು ಮೇಳವಲ್ಲದೆ ಬೇರೆ ಯಾವ ಮೇಳದ ತಿರುಗಾಟಕ್ಕೆ ಸೇರುವುದಿಲ್ಲ. ಕಲಾವಿದರು ಯಾವ ಜಾತಿಯ ಸ್ವಾಮ್ಯಕ್ಕೆ ಒಳಪಟ್ಟಿಲ್ಲ. ಎಲ್ಲರೂ ಒಂದೇ. ಇದರಲ್ಲಿ ಯಾರೂ ಜಾತೀ ರಾಜಕೀಯ ತರಬಾರದು' ಎಂದು ಪಟ್ಲ ವಿನಂತಿಸಿದರು..
ಲಕ್ಷ್ಮೀನಾರಾಯಣ ಆಸ್ರಣ್ಣರು ಮಾತನಾಡಿ, 'ಕಳೆದ 2 ದಿನಗಳಿಂದ ಅವಾಂತರ ಸೃಷ್ಟಿಯಾಗಿದ್ದು, ಪಟ್ಲ ಅವರ ಬಗ್ಗೆ ಅಂತಹ ಮಾತುಗಳನ್ನು ಆಡಿಲ್ಲ. ಪಟ್ಲರ ಬಗ್ಗೆ ಅಭಿಮಾನವಿದೆ. ನಾವೂ ಮುಂದೆಯೂ ಒಟ್ಟಾಗಿ ಮುನ್ನಡೆಯುತ್ತೇವೆ' ಎಂದರು. ಈ ಸಂದರ್ಭ ಕಟೀಲು ಮೇಳದ ಸಂಚಾಲಕ ದೇವಿಪ್ರಸಾದ್ ಶೆಟ್ಟ, ಯುಗಪುರುಷದ ಭುವನಾಭಿರಾಮ ಉಡುಪ ಉಪಸ್ಥಿತರಿದ್ದರು.
ಕೃಪೆ :
http://vijaykarnataka.com
|
|
|